Professional Documents
Culture Documents
01 Kannada Mahabharatha
01 Kannada Mahabharatha
ಯಾರೊಬ್ಬನನ್ನೂ ಕೊಲ್ಲಲಿಲ್ಲ. ವೀರ ಕರ್ಣನೂ ಕೂಡ ಧನುಸ್ಸಿನ ತುದಿಯಿಂದ ಭೀಮನನ್ನು ಎಳೆಯುತ್ತಾ ತನ್ನ ವಶದಲ್ಲಿ
ತೆಗೆದುಕೊಂಡಿದ್ದರೂ ಬರಿಯ ಮೂದಲಿಕೆಯ ಮಾತುಗಳನ್ನು ಹೇಳಿ ಅವನನ್ನು ವಧಿಸದೇ ಬಿಟ್ಟನು. ದ್ರೋಣ, ಕೃತವರ್ಮ, ಕೃಪ, ಕರ್ಣ,
ಅಶ್ವತ್ಥಾಮ ಮತ್ತು ಮದ್ರರಾಜ ಶಲ್ಯ ಇವರೆಲ್ಲರೂ ಸೈಂಧವನ ವಧೆಯಾಗಲು ಬಿಟ್ಟರು. ದೇವರಾಜನಿಂದ ದೊರೆತ ದಿವ್ಯ ಶಕ್ತಿಯನ್ನು
ಕರ್ಣನು ಮಾಧವನ ಯೋಜನೆಯಂತೆ ಘೋರರೂಪೀ ರಾಕ್ಷಸ ಘಟೋತ್ಕಚನ ಮೇಲೆ ಉಪಯೋಗಿಸಿದನು. ಆಚಾರ್ಯ ದ್ರೋಣನು
ಒಬ್ಬನೇ ರಥದಲ್ಲಿ ಕುಳಿತು ಪ್ರಾಯಗತನಾಗಿದ್ದಾಗ ಧರ್ಮವನ್ನು ಅತಿಕ್ರಮಿಸಿ ಧೃಷ್ಟದ್ಯುಮ್ನನು ಅವನನ್ನು ಸಂಹರಿಸಿದನು.
ದ್ರೋಣಾವಸಾನದ ನಂತರ ಅವನ ಮಗ ಅಶ್ವತ್ಥಾಮನು ಬಿಟ್ಟ ದಿವ್ಯ ನಾರಾಯಣಾಸ್ತ್ರವೂ ಪಾಂಡವರನ್ನು ಕೊನೆಗೊಳಿಸುವಲ್ಲಿ
ಅಸಫಲವಾಯಿತು. ಯುದ್ಧದಲ್ಲಿ ಗೆಲ್ಲಲಸಾಧ್ಯ ಅತಿ ಶೂರನ ಕರ್ಣನೂ ಕೂಡ ದೇವತೆಗಳಿಗೂ ಗುಹ್ಯವಾಗಿದ್ದ ಆ ಸಹೋದರರ
ಸಮರದಲ್ಲಿ ಪಾರ್ಥನಿಂದ ಹತನಾದ! ಸಂಗ್ರಾಮ ಸಾರಥ್ಯದಲ್ಲಿ ಕೃಷ್ಣನೊಂದಿಗೆ ಸ್ಪರ್ಧಿಸುತ್ತಿದ್ದ ಶೂರ ಮದ್ರರಾಜನು ಧರ್ಮರಾಜನಿಂದ
ಮತ್ತು ಕಲಹದ್ಯೂತದ ಮೂಲ, ಮಹಾಮಾಯ ಪಾಪಿ ಸೌಬಲ ಶಕುನಿಯು ಸಂಗ್ರಾಮದಲ್ಲಿ ಪಾಂಡವ ಸಹದೇವನಿಂದ ಹತರಾದರು.
ಭಗ್ನದರ್ಪ ದುರ್ಯೋಧನನು ವಿರಥನಾಗಿ ಸರೋವರಕ್ಕೆ ಹೋಗಿ ನೀರನ್ನು ಸ್ಥಿರಗೊಳಿಸಿ ಒಬ್ಬನೇ ಮಲಗಿ ವಿಶ್ರಾಂತಿ
ಪಡೆದುಕೊಳ್ಳುತ್ತಿರುವಾಗ ವಾಸುದೇವನನ್ನೊಡಗೂಡಿದ ಪಾಂಡವರು ಅದೇ ಸರೋವರದ ದಡದಮೇಲೆ ನಿಂತು ನನ್ನ ಮಗನನ್ನು
ಅಸಹ್ಯ ಮತ್ತು ಅಶ್ಲೀಲವಾಗಿ ಮೂದಲಿಸಿದರು. ಗದಾಯುದ್ಧದಲ್ಲಿ ಅತ್ಯಂತ ಕುಶಲಿಯಾಗಿದ್ದ ನನ್ನ ಮಗನನ್ನು ಕೃಷ್ಣನ ಸಲಹೆಯಂತೆ
ಅನ್ಯಾಯವಾಗಿ ಹೊಡೆದುರುಳಿಸಲಾಯಿತು! ಮಲಗಿದ್ದ ಪಾಂಚಾಲ ಮತ್ತು ದ್ರೌಪದಿಯ ಮಕ್ಕಳನ್ನು ಅಶ್ವತ್ಥಾಮ ಮತ್ತು ಇತರರು
ಅನಾವಶ್ಯಕವಾಗಿ ಕೊಲ್ಲುವ ಬೀಭತ್ಸ ಕರ್ಮವನ್ನೆಸಗಿದರು. ಭೀಮಸೇನನು ಬೆನ್ನಟ್ಟಿ ಹೋಗಲು ಅಶ್ವತ್ಥಾಮನು ಸಿಟ್ಟಿನಿಂದ
ಹುಲ್ಲುಕಡ್ಡಿಯ ಮೂಲಕ ಪರಮಾಸ್ತ್ರವನ್ನು ಬಿಟ್ಟು ಗರ್ಭವಧೆಗೈದನು. ಅಶ್ವತ್ಥಾಮನ ಬ್ರಹ್ಮಶಿರವು ಅರ್ಜುನನು ಸ್ವಸ್ತಿ ಎಂದು ಬಿಟ್ಟ
ಅಸ್ತ್ರದಿಂದ ಶಾಂತಗೊಂಡಿತು.
"ಪಾಂಡವರು ಸರಿಸಾಟಿಯಿಲ್ಲದ ರಾಜ್ಯವನ್ನು ಪುನಃ ಪಡೆಯುವ ದುಷ್ಕರ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮಕ್ಕಳು,
ಮೊಮ್ಮಕ್ಕಳು, ತಂದೆ ಮತ್ತು ಸಹೋದರರನ್ನು ಕಳೆದುಕೊಂಡ ಗಾಂಧಾರಿಯ ಕುರಿತು ಶೋಕಿಸಬೇಕು. ಈ ಸಂಗ್ರಾಮದಲ್ಲಿ ೧೮
ಅಕ್ಷೌಹಿಣೀ ಕ್ಷತ್ರಿಯರು ಹತರಾಗಿ ಕೇವಲ ೧೦ ಮಂದಿ ಮಾತ್ರ – ನಮ್ಮವರು ಮೂರು ಮತ್ತು ಪಾಂಡವರ ಕಡೆಯವರು ಏಳು –
ಉಳಿದುಕೊಂಡಿದ್ದಾರೆ ಎನ್ನುವುದನ್ನು ಕೇಳಲು ಬಹಳ ಕಷ್ಟವಾಗುತ್ತಿದೆ. ಸೂತ! ನನ್ನ ಮನಸ್ಸು ವಿಹ್ವಲವಾಗಿದೆ. ಪ್ರಜ್ಞೆಯನ್ನು
ಕಳೆದುಕೊಂಡವನಂತಾಗಿದ್ದೇನೆ. ಮೋಹಪರವಶನಾದ ನನ್ನನ್ನು ಕತ್ತಲೆಯು ಆವರಿಸುತ್ತಿದೆ!”
ಬಹುದುಃಖಿತ ಧೃತರಾಷ್ಟ್ರನು ಈ ರೀತಿ ವಿಲಪಿಸುತ್ತಾ ಮೂರ್ಛೆ ಹೊಂದಿ, ಪುನಃ ಎಚ್ಚೆತ್ತು ಸಂಜಯನಿಗೆ ಹೇಳಿದನು: “ಸಂಜಯ!
ಈಗಲೇ ಈ ಪ್ರಾಣವನ್ನು ತ್ಯಜಿಸಲು ಬಯಸುತ್ತೇನೆ. ಬದುಕಿರುವುದರಲ್ಲಿ ಯಾವ ಫಲವನ್ನೂ ಕಾಣುತ್ತಿಲ್ಲ!”