ಸಹೃದಯ ಮಿತರ್ರೂ ಇದೀಗ ಜನಪ್ರಿಯರೂ ಆಗಿರುವ ಲೇಖಕರು ನನ್ನಲ್ಲಿ ವಿಶ್ವಾಸವಿಟ್ಟು
ಮನೆಗೆ ಕಳಿಸಿದ ಹೊಸ ಸರಣಿ ಕಾದಂಬರಿಯ ಮೊದಲ ಭಾಗ ಇದು.
ಈ ಸಲ ಸದಾ ಹೊಸ ಹೊಸ ಕಥಾವಸ್ತುಗಳನ್ನು ಪರಿಚಯಿಸುವ ಅಭ್ಯಾಸದ ಲೇಖಕ ಬಿ
ಆರ್ ಚಂದ್ರಶೇಖರ ಬೇದೂರು ಇಲ್ಲಿ ದಕ್ಷಿಣ ಧ್ರುವದ ಅಂಟಾರ್ಟಿಕಾ ಖಂಡಕ್ಕೆ ಸಾಹಸ ಯಾತ್ರೆಗೆ ಹೊರಟು ನಿಂತ ನಾಯಕ ಹಿಮಾಂಶು ಮತ್ತು ಆತನ ಜತೆ ಸೇರಲಿರುವ ಹತ್ತು ಜನ ಸಂಶೋಧಕ ವಿಜ್ಞಾನಿಗಳ ವಸ್ತುವನ್ನು ಎತ್ತಿಕೊಂಡಿದ್ದಾರೆ.
ಬಿ ಆರ್ ಚಂದ್ರಶೇಖರ ಅವರು ಪುರಾತನ ಹಿಂದೂ ಧರ್ಮ ಮತ್ತು ಸನಾತನ
ಸಂಸ್ಕೃತಿಯ ಬಗ್ಗೆ ಅಪಾರ ವಿಶ್ವಾಸ ಮತ್ತು ಆಸಕ್ತಿ ಉಳ್ಳವರು. ತಾವೂ ಅಧ್ಯಯನ ಮಾಡಿ ಓದುಗರಿಗೂ ಅದರ ಸವಿ, ಸ್ವಾರಸ್ಯ ಉಣಬಡಿಸಬಲ್ಲರು
ಈ ಸಲ ಅವರು ತೆಗೆದುಕೊಂಡಿರುವ ಕಥಾಹಂದರದ ಕ್ಯಾನ್ವಾಸ್ ಬಹಳ
ವ್ಯಾಪ್ತಿಯುಳ್ಳದ್ದು. ಅಂತರರಾಷ್ಟ್ರೀಯ ತನಿಖೆಗೆ ವೈಜ್ಞಾನಿಕ ಅನ್ವೇಷಣೆಗಳ ಬೆಸುಗೆ ಸಹಾ ಹಾಕಿದ್ದಾರೆ.
ಅಂಟಾರ್ಟಿಕಾ ಖಂಡದ ಬಗ್ಗೆ ಭಾರತದ ಸಂಶೋಧನೆ ಮತ್ತು ಅದೊಂದು ಬೇರೆಯೇ
ವಿಶ್ವಕ್ಕೆ ಪೋರ್ಟಲ್ ಅಥವ ಸ್ಟಾರ್ಗೇಟ್ ತರಹ ಇರಬಹುದು ಎಂಬುದನ್ನು ಅವರು ಸೂಚಿಸಹೊರಟಿದ್ದಾರೆ ಎಂದು ನನಗೆ ಅರಿವಾಯಿತು. ಅಲ್ಲಿಗೆ ಹೊರಟ ರೋಮಾಂಚಕಾರಿ ಹಡಗಿನ ಪ್ರಯಾಣಕ್ಕೆ ಭಾರತದ ಧರ್ಮ ಇತಿಹಾಸ, ಪುರಾಣದ ಬಗ್ಗೆ ಬಹಳ ಗೌರವ ಮತ್ತು ಕುತೂಹಲ ಹೊಂದಿದ ನಾಯಕ ಹಿಮಾಂಶು ಮಾರ್ಗ ಮಧ್ಯೆ ಕೆಲವು ದ್ವೀಪಗಳಲ್ಲಿಳಿದು ಭಯಾನಕ ದೈತ್ಯ ಜೀವಿಗಳನ್ನು ಎದುರು ನೋಡುತ್ತಾನೆ. ಜೀವಾಪಾಯ ಎದುರಾಗಿ ಸಾಹಸ ಮಾಡುತ್ತಾನೆ. ಅಲ್ಲೊಂದು ಉಪಕಥೆ ಬಿಚ್ಚಿಕೊಳ್ಳುತ್ತದೆ. ಬೆಚ್ಚಿಕೊಳ್ಳುವಂತೆಯೂ ಇದೆ. ಮೆಚ್ಚಿಕೊಳ್ಳುಕೊಳ್ಳುವಂತೆಯೂ ಸಹಾ!
ಅಲ್ಲೆಲ್ಲ ಚೀನಾದ ವೈಜ್ಞಾನಿಕ ಪ್ರಯೋಗಶಾಲೆ, ರೋಬೋಟೀಕ್ಸ್, ಜೈವಿಕ ಶಾಸ್ತ್ರದ
ಪ್ರಗತಿ ಹೀಗೆ ಕಥೆ ಮಗ್ಗಲು ಬದಲಿಸುತ್ತದೆ. ಈ ಮೊದಲ ಭಾಗದ ಕಾದಂಬರಿಯ ಅಂತ್ಯಕ್ಕೆ ಭಾರತದಿಂದ ಹೊರಟ ಹಿಮಾಂಶು ಹಡಗಿನ ತಂಡ ಮತ್ತೆ ದ.ಆಫ್ರಿಕಾದಿಂದ ಅಂಟಾರ್ಟಿಕಾ ಕಡೆಗೆ ಪಯಣ ಆರಂಭಿಸುತ್ತದೆ ಎಂಬಲ್ಲಿ ಕೊನೆಯಾಗಿದೆ.
ಮುಂದೇನಾಗುವುದೋ ಎಂದು ನಾವು ನಿರೀಕ್ಷಿಸಬೇಕಾಗಿದೆ.
ಅಲ್ಲಲ್ಲಿ ಮತ್ತೆ ಕರಡು ತಿದ್ದುಪಡಿ ದೋಷ/ ಮುದ್ರಣ ದೋಷ ಕಂಡಿದೆ. ಮುಂದಿನ
ಮುದ್ರಣಕ್ಕೆ ಮುನ್ನ ಸರಿಪಡಿಸುವರು ಎಂದು ನಂಬಿದ್ದೇನೆ
ಕನ್ನಡ ಓದುಗರು ಇದೀಗ ಓದಬೇಕಾಗಿರುವ ವಸ್ತು ನಾವೀನ್ಯತೆ ಉಳ್ಳ ಸರಣಿ