Professional Documents
Culture Documents
02 Kannada Mahabharatha
02 Kannada Mahabharatha
ಪಾಂಡವರು ಅಲ್ಲಿ ಯಾರಿಂದಲೂ ಕಡೆಗಣಿಸಲ್ಪಡದೇ, ಎಲ್ಲರಿಂದ ಪೂಜಿತರಾಗಿ ವಾಸಿಸುತ್ತಿದ್ದು ಅಖಿಲ ವೇದ ಮತ್ತು ವಿವಿಧ ಶಾಸ್ತ್ರಗಳ
ಅಧ್ಯಯನ ಮಾಡಿದರು. ಯುಧಿಷ್ಠಿರನ ಪವಿತ್ರತೆ, ಭೀಮಸೇನನ ಧೈರ್ಯ, ಅರ್ಜುನನ ವಿಕ್ರಮ, ಕುಂತಿಯ ಶುಶ್ರೂಷೆ, ಅವಳಿ ಮಕ್ಕಳ
ವಿನಯ ಮತ್ತು ಇವೆಲ್ಲವುಗಳನ್ನೂ ಮೀರಿದ ಅವರ ಶೌರ್ಯಗುಣಗಳಿಂದ ಎಲ್ಲ ಜನರೂ ಸಂತುಷ್ಟರಾದರು. ಸಮಯಾನಂತರದಲ್ಲಿ
ಅರ್ಜುನನು ಸ್ವಯಂವರದಲ್ಲಿ ದುಷ್ಕರ ಕಾರ್ಯವೊಂದನ್ನೆಸಗಿ ರಾಜಕನ್ಯೆ ದ್ರುಪದನ ಮಗಳು ಕೃಷ್ಣೆಯನ್ನು ಪತ್ನಿಯನ್ನಾಗಿ ಪಡೆದನು.
ಅಂದಿನಿಂದ ಅವನು ಸರ್ವಲೋಕದ ಧನುಷ್ಮಂತರಲ್ಲಿ ಪೂಜನೀಯ ಮತ್ತು ಸಮರದಲ್ಲಿ ಕಣ್ಣುಕುಕ್ಕುವ ಸೂರ್ಯನಂತೆ ನೋಡಲಸಾಧ್ಯ
ಎನ್ನಿಸಿಕೊಂಡನು. ಅವನು ಎಲ್ಲ ರಾಜರನ್ನೂ ಅವರೆಲ್ಲರ ಮಹತ್ತರ ಸೈನ್ಯಗಳನ್ನೂ ಗೆದ್ದು ಯುಧಿಷ್ಠಿರನ ರಾಜಸೂಯ ಮಹಾಯಜ್ಞಕ್ಕೆ
ಸಹಾಯಮಾಡಿದನು. ವಾಸುದೇವ ಕೃಷ್ಣನ ಸುನೀತಿ ಮತ್ತು ಭೀಮಾರ್ಜುನರ ಬಲದಿಂದ ಬಲಗರ್ವಿತ ಜರಾಸಂಧ ಮತ್ತು
ಶಿಶುಪಾಲರನ್ನು ಸಂಹರಿಸಿ ಯುಧಿಷ್ಠಿರನು ಎಲ್ಲ ಉತ್ತಮ ಗುಣಗಳಿಂದಲೂ ಕೂಡಿದ ಬಹು ವಿಜೃಂಭಿತ ರಾಜಸೂಯ ಯಾಗವನ್ನು
ಪೂರೈಸಿದನು.